ಹನ್ನೆರಡು ರಾಶಿಗಳು ಅಗ್ನಿ, ಭೂ, ವಾಯು, ಜಲತತ್ವರಾಶಿಗಳಾಗಿ ಭಾಗವಾಗಿದೆ. ಅದರಲ್ಲಿ ಮೇಷ, ಸಿಂಹ ಹಾಗೂ ಧನಸ್ಸು ಅಗ್ನಿ ತತ್ವರಾಶಿ, ವೃಷಭ, ಕನ್ಯಾ ಹಾಗೂ ಮಕರ ಭೂ ತತ್ವರಾಶಿ ಮಿಥುನ, ತುಲಾ ಮತ್ತು ಕುಂಭ, ವಾಯು ತತ್ವರಾಶಿ ಹಾಗೂ ಕಟಕ, ವೃಶ್ಚಿಕ, ಮೀನ ಜಲ ತತ್ವರಾಶಿಗಳಿಗೆ ಸೇರಿವೆ.
ಅಗ್ನಿ ತತ್ವರಾಶಿಗಳಾದ ಮೇಷ, ಸಿಂಹ ಹಾಗೂ ಧನುಸ್ಸು ರಾಶಿಗಳಲ್ಲಿ ಜನಿಸಿದವರು ಅತ್ಯಂತ ಬುದ್ಧಿವಂತರು. ಸದಾ ಚಟುವಟಿಕೆ ಸ್ವಭಾವದವರು. ನಿರಂತರ ಏನಾದರೂ ಒಂದು ಕೆಲಸ ಮಾಡುತ್ತಲೇ ಇರುವರು. ಇವರು ಸಮಯ ವ್ಯರ್ಥ ಮಾಡುವುದಿಲ್ಲ. ಮಾತು, ನಡೆ-ನುಡಿ ಎಲ್ಲವೂ ನೇರ. ಸ್ವಲ್ಪ ಹಠ ಸ್ವಭಾವ. ರಾಜಕೀಯ, ಸಮಾಜ ಸೇವೆ, ಸರ್ಕಾರಿ ಕೆಲಸಗಳಲ್ಲಿ ಹೆಚ್ಚು ಆಸಕ್ತಿಯುಳ್ಳವರು. ಪೂರ್ವ ದಿಕ್ಕು ಇವರಿಗೆ ಬಹಳ ಒಳ್ಳೆಯದು.
ಭೂ ತತ್ವರಾಶಿಗಳಾದ ವೃಷಭ, ಕನ್ಯಾ ಹಾಗೂ ಮಕರ ರಾಶಿಯಲ್ಲಿ ಜನಿಸಿದವರು ತಾಳ್ಮೆ, ಸಮಾಧಾನಗಳಿಂದ ವ್ಯವಹರಿಸುವವರು. ಪ್ರತಿಯೊಂದನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಂತರ ಕೆಲಸಕ್ಕೆ ಕೈ ಹಾಕುವರು. ಇವರಿಗೆ ಸಂಬಂಧ ಪಡದ ವಿಷಯಗಳಿಗೆ ತಲೆ ಹಾಕುವುದಿಲ್ಲ. ಪ್ರತಿ ಕೆಲಸವನ್ನೂ ಕಾನೂನಿನ ಚೌಕಟ್ಟಿನಲ್ಲೇ ಮಾಡುತ್ತಾರೆ. ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ವ್ಯವಸಾಯ, ಭೂ ವ್ಯಾಪಾರ, ವ್ಯವಹಾರ, ಮನೆ ನಿರ್ಮಾಣ ಹಾಗೂ ಇವರಿಗೆ ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲೇ ಹೆಚ್ಚು ಆಸಕ್ತಿ. ದಕ್ಷಿಣ ದಿಕ್ಕು ಒಳ್ಳೆಯದು.
ವಾಯು ತತ್ವರಾಶಿಗಳಾದ ಮಿಥುನ, ತುಲಾ ಮತ್ತು ಕುಂಭ ರಾಶಿಯಲ್ಲಿ ಜನಿಸಿದವರು ಅತಿ ಬುದ್ಧಿವಂತರಾಗಿರುತ್ತಾರೆ. ಇವರು ಸಮಾಜಕ್ಕೆ ಅಂಜಿ ನಡೆಯುವ ಸ್ವಭಾವದವರು. ಇವರು ಕಾನೂನಿನ ಚೌಕಟ್ಟನ್ನು ಎಂದೂ ಮೀರುವುದಿಲ್ಲ. ಹೊಸ ಹೊಸ ಆವಿಷ್ಕಾರ ಮಾಡುತ್ತಿರುತ್ತಾರೆ. ಯಾವುದೇ ಕೆಲಸವನ್ನು ಗುಪ್ತವಾಗಿ ಮಾಡುತ್ತಾರೆ. ಯಾವ ವಿಷಯವನ್ನಾಗಲೀ ಮನಸ್ಸು ಬಿಚ್ಚಿ ಹೇಳುವುದಿಲ್ಲ. ಎಲ್ಲವನ್ನೂ ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗುತ್ತಿರುತ್ತಾರೆ. ಈ ರಾಶಿಯವರು ಗಣಿತ, ಲೆಕ್ಕ ಪತ್ರಗಳಲ್ಲಿ, ವಿಜ್ಞಾನ, ಜ್ಯೋತಿಷ್ಯ, ವಾಣಿಜ್ಯ ವ್ಯವಹಾರ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿಯುಳ್ಳವರು. ಪಶ್ಚಿಮ ದಿಕ್ಕು ಒಳ್ಳೆಯದು.
ಜಲ ತತ್ವರಾಶಿಗಳಾದ ಕಟಕ, ವೃಶ್ಚಿಕ ಹಾಗೂ ಮೀನ ರಾಶಿಯಲ್ಲಿ ಜನಿಸಿದವರು ಮೃದು ಸ್ವಭಾವದವರು. ಯಾವುದಕ್ಕೂ ತಾವಾಗಿಯೇ ಮುನ್ನುಗ್ಗುವುದಿಲ್ಲ. ಭಾವನಾ ಪ್ರಿಯರು, ಬೇರೆಯವರಿಂದ ಬಹಳ ಬೇಗ ಮೋಸ ಹೋಗುವವರು. ಸಣ್ಣ ಸಣ್ಣ ವಿಷಯಗಳಿಗೂ ಅತಿಯಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಇವರು ಏಕಾಂತ ಪ್ರಿಯರು, ನೀರೆಂದರೆ ಇವರಿಗೆ ಹೆಚ್ಚಿನ ಭಯವಿರುವುದು. ಪ್ರಕೃತಿ ಪ್ರಿಯರು. ಈ ರಾಶಿಯವರು ಕಲೆ, ಸಾಹಿತ್ಯ, ಔಷಧ ಶಾಸ್ತ್ರ, ನೀರಿನಲ್ಲಿ ಉತ್ಪಾದನೆಯಾಗುವ ದ್ರವ್ಯಗಳ ಕೆಲಸದಲ್ಲಿ ಹೆಚ್ಚಿನ ಆಸಕ್ತಿ. ಉತ್ತರ ದಿಕ್ಕು ಒಳ್ಳೆಯದು.
ವ್ಯಕ್ತಿಯ ಸ್ವಭಾವವನ್ನು ಅವನೊಂದಿಗೆ ಒಡನಾಡಿ, ಅವನ ಮುಖ ನೋಡಿಯೇ ಹೇಳಬೇಕಂತಿಲ್ಲ. ಅವನ ನಕ್ಷತ್ರ- ರಾಶಿ ನೋಡಿಯೂ ಹೇಳಬಹುದು...